ಕನ್ನಡದ ಬಲಿಪಶು...!

ಈ ಬ್ಲಾಗಿನಲ್ಲಿ ಪ್ರೇಮ,ಕಾಮ,ಅಸಹ್ಯ,ಚಿಂತಕ,ನೋವು,ನಲಿವು,...ಎಲ್ಲವನ್ನು ಒಳಗೊಂಡ ಕಣ್ಣೀರು ಹರಿದಾಡುತ್ತದೆ..

ಶುಕ್ರವಾರ, ಜನವರಿ 22, 2010

ಬ್ಲಾಗೆಂಬ ಸಾಗರದಲ್ಲಿ "ಬಲಿಪಶು" ಎಂಬ ದೋಣಿಯಲ್ಲಿ ಪಯಣಿಸುತ್ತಿದ್ದ ನಾನು "ಮನಸಿನ ಮನೆ " ಎಂಬ ದೋಣಿಗೆ ಕಾಲಿಕ್ಕಿ ಪಯಣ ಮುಂದುವರಿಸಲು ಇಚ್ಚಿಸುತ್ತೇನೆ..
ನನ್ನ ಈ ಬ್ಲಾಗನ್ನು ಇಲ್ಲಿಗೆ ನಿಲ್ಲಿಸಿದ್ದೇನೆ..
ಈಗ ನನ್ನ ಬ್ಲಾಗ್: www.manasinamane.blogspot.com ಆಗಿದೆ.
ದಯವಿಟ್ಟು ಎಲ್ಲರೂ ನನ್ನ ಆ ಬ್ಲಾಗನ್ನು ನೋಡಿ ನನ್ನ 'ಮನಸಿನಮನೆ'ಗೆ ಹರಸಿರೆಂದು ಕೋರುವೆ..


--ಇಂತಿ ನಿಮ್ಮವ/-

ಶನಿವಾರ, ಡಿಸೆಂಬರ್ 5, 2009

ಮೊದಲೇ ಹೇಳಿದಂತೆ ನನಗೆ ಈಗ 'ಸಮಯವೇ ಸರಿಯಿಲ್ಲ' ಎನ್ನುವ ಬಲಿಪಶು ನಾನು..! ನಂಗೆ ಈಗ ರಾಹುದೆಸೆ..
ಈ ರಾಹುದೆಸೆಯಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಹಾಳಾಗುತ್ತೆ ಎಂದು ನನಗೆ ತಿಳಿದಿತ್ತು,ಆದರೆ ಕೆಲವು ಮಾತ್ರ ಸುಸೂತ್ರವಾಗಿ ನೆರವೇರುತ್ತಲಿದ್ದವು.. ಆಗ ಒತ್ತಾಯದ ಮೇರೆಗೆ ನಾನು ನನ್ನ ಈ ಬ್ಲಾಗನ್ನು ಸೃಷ್ಟಿಸಬೇಕಾಯಿತು.. ಮುಂದೆ ನನ್ನ ಬ್ಲಾಗು ಯಾರ ಗಮನಕ್ಕೂ ಬಾರದೆ, ನಾನು ಪ್ರೀತಿಯಿಂದ ಬರೆಯುತ್ತಿದ್ದ ಲೇಖನಗಳನ್ನುಯಾರೂ ನೋಡದೆ ನನಗೆ ಬೇಸರವಾಗಿ ಒಂದು ಋತುವಿನ ಹಿಂದೆ ಈ ಬ್ಲಾಗನ್ನು ತೆಗೆದುಹಾಕಿ ನನಗೆ ಒಳ್ಳೆ ಸಮಯ ಬಂದಾಗ ಮತ್ತೆ ಸೃಷ್ಟಿಸುವ ಆಶಯ ವ್ಯಕ್ತಪಡಿಸಿದೆ.. ಆದರೆ ಅದೇ ಸಮಯಕ್ಕೆ, ಇನ್ನೂ ಎರಡೇ ಲೇಖನಗಳನ್ನು ಒಳಗೊಂಡಿದ್ದ, ನನ್ನ ಬ್ಲಾಗ್ "ಕನ್ನಡಪ್ರಭದ ಬ್ಲಾಗಾಯಣ"ದಲ್ಲಿ ಪ್ರಕಟವಾಯಿತು.. ಇದರಿಂದಾಗಿ ಒಲ್ಲದ ಮನಸ್ಸಿನಿಂದಲೇ ಕಣ್ಣೀರಿನ ಹೊಳೆಯ ನಡುವಲಿ ಕೈ ಬಿಟ್ಟಿದ್ದ ನನ್ನ ಬ್ಲಾಗನ್ನು ಮತ್ತೆ ಕೈಹಿಡಿಯಬೇಕಾಯಿತು..

ವಿಧಿಯಿಂದ ಮತ್ತೆ ಮತ್ತೆ ಎಷ್ಟೇ ಹೊಡೆತ ತಿಂದರೂ ಮೊಂಡ ಧೈರ್ಯ ಮಾಡಿ ಮೇಲೇಳುತ್ತಿದ್ದ ನನಗೆ ಇತ್ತೀಚಿಗೆ ವಿಧಿ ಭಾರಿ ಹೊಡೆತ ನೀಡಿದೆ,ನನ್ನ ಭವಿಷ್ಯದ ಮೇಲೆ ಅಗಾಧ ಪರಿಣಾಮ ಬೀರಿದ ಈ ಪೆಟ್ಟಿನಿಂದ ಒಂದು ಮಾಸದಿಂದ ನನ್ನೆದೆಯ ಗರ್ಭದಲ್ಲಿ ಚಿಗುರುತ್ತಿದ್ದ ಕನಸಿನ ಮನೆ ನಲುಗಿ ಚೂರಾಗಿದೆ...ಇದರಿಂದಾಗಿ ನನ್ನ ಮನಸ್ಸು ಹುಚ್ಚು ಹಿಡಿದಂತಾಗಿ ಅಲೆದಾಡತೊಡಗಿದೆ.. ದುಡುಕಿ ತಪ್ಪೋ ಸರಿಯೋ ಯೋಚಿಸದೆ ಕೆಲ ನಿರ್ಧಾರಗಳನ್ನು ಮಾಡುತ್ತಿದೆ...ಅಂತಹ ನಿರ್ಧಾರಗಳಲ್ಲಿ ನನ್ನ ಈ ಬ್ಲಾಗನ್ನು ಮತ್ತೆ ಕಣ್ಣೀರಿನ ಹೊಳೆಯಲ್ಲಿ ಮುಳುಗಿಸಿ ಇನ್ನೂ ಕೆಲವೇ ದಿನಗಳಲ್ಲಿ ಒಳ್ಳೆಯ ಸಮಯ ನೋಡಿ ಮತ್ತೆ ಹೊಸದಾಗಿ ಆರಂಭಿಸುವುದು ಒಂದಾಗಿದೆ..

ವಿಧಿ ನನ್ನ ಬ್ಲಾಗನ್ನು ಕಿತ್ತುಕೊಳ್ಳುತಿದೆಯೇ ಹೊರತು ನನ್ನ ಸೃಜನಾಶೀಲ ಶಕ್ತಿಯನ್ನಲ್ಲ, ನನಗೆ ಬರೆಯಲು ಮನಸ್ಸಿಲ್ಲದೆ ನಾನು ಬ್ಲಾಗಿನಿಂದ ದೂರವಾಗುತ್ತಿಲ್ಲ...

ಸ್ವಲ್ಪ ದಿನಗಳ ನಂತರ ನಿಮ್ಮ ಮುಂದೆ ಇಡುವ ನನ್ನ ಹೂವಿನಂತ ಬ್ಲಾಗನ್ನು ಕಾಪಾಡುವುದು ನಿಮ್ಮ ಕೈಯಲ್ಲೇ ಇದೆ..

ದಯವಿಟ್ಟು ನನ್ನೀ ನಿರ್ಧಾರವನ್ನು ಬದಲಾಯಿಸಲು ಯಾರೂ ಒತ್ತಾಯಿಸಬೇಡಿ..

--ಇಂತಿ:
ನಿಮ್ಮ ಜೊತೆಯ ಸ್ವಲ್ಪ ದಿನಗಳ ಬ್ಲಾಗಿಗ-
-ಎ.ಕಾ ಗುರುಪ್ರಸಾದಗೌಡ.;hanebaraha@gmail.com

ಭಾನುವಾರ, ನವೆಂಬರ್ 1, 2009

ಓ ಕನ್ನಡವೇ..

"ಸಿರಿಗನ್ನಡಂ ಗೆಲ್ಗೆ" "ಜೈ ಕರ್ನಾಟಕ ಮಾತೆ" "ಸಿರಿಗನ್ನಡಂ ಬಾಳ್ಗೆ"

ಸಮಸ್ತ ಕನ್ನಡ ಕುಲಕೋಟಿಗೆ 'ಕನ್ನಡ ರಾಜ್ಯೋತ್ಸವದ ಶುಭಾಶಯಗಳು'.

[ಸೂಚನೆ:೧)ತನ್ನ ಆದರ್ಶಗಳನ್ನು ಮಾರಿಕೊಳ್ಳದ ಕರುನಾಡ ಜನತೆಯಲ್ಲಿ ನೀವೊಬ್ಬರಾಗಿದ್ದರೆ ನೀವು ಈ ಬರಹವನ್ನು ಸಂಪೂರ್ಣವಾಗಿ ಓದಬೇಕು.. ಇಲ್ಲವಾದಲ್ಲಿ ದಯವಿಟ್ಟು ಓದಲು ಪ್ರಾರಂಭ ಮಾಡುವುದೇ ಬೇಡ.
೨)ಇಲ್ಲಿ ಪ್ರಸ್ತಾಪಿಸಿರುವ ವಿಷಯ ಹೀಗಾಗಲೇ ತಿಳಿದಿರುವ ವಿಷಯ ಆಗಿರಬಹುದು ,ಆದರೆ ನನಗೆ ಬರೆಯಬೇಕೆಂದು ಅನಿಸಿರುವುದರಿಂದ ಬರೆಯುತ್ತಿದ್ದೇನೆ..ಇದೇನು ನಿಮಗೆ ಹೊಸದಲ್ಲ ಎನಿಸಬಹುದು.
೩)ಈ ಬರಹವು ಯಾವುದೇ ವ್ಯಕ್ತಿಗೆ ಬೇಕಾದರೂ ಹೋಲಿಕೆಯಾಗಬಹುದು.]

ಇಲ್ಲಿ ನನಗೆ ಮೂಡಿರುವ ಪ್ರಶ್ನೆ...
ಪಂಚಕೋಟಿ ಕರುನಾಡಿನವರಲ್ಲಿ ಕನ್ನಡಿಗರೆಷ್ಟು?

ಪುಣ್ಯಭೂಮಿ ಕರುನಾಡಲ್ಲಿ ಜನ್ಮತಳೆದು,ಇಲ್ಲಿನ ಸಂಪತ್ತಿನಿಂದಲೇ ಬದುಕಿ,ಇಲ್ಲೇ ಹತರಾಗಬೇಕಾದ ಕೋಟ್ಯಾನುಕೋಟಿ ಮಕ್ಕಳು ನಮ್ಮ ಕನ್ನಡ ತಾಯಿಗೆ ಇದ್ದಾರೆ..ಆದರೆ ಅವರಲ್ಲಿ ಕೆಲವರು ಮಾತ್ರ ನಿಜವಾದ ಕನ್ನಡಿಗರು ಎಂದು ನನ್ನ ಅನಿಸಿಕೆ...


ಇನ್ನುಳಿದ ಹಲವಾರು ಮಹಾಶಯರು ತಾವು ಕನ್ನಡದವರು ಎಂಬುದನ್ನು ಮರೆತು ತಮ್ಮ ಮಕ್ಕಳು ಕನ್ನಡ ಕಲಿಯಲು "ಅಮ್ಮಾ" ಎಂದು ಓಂಕಾರ ಹಾಕುವ ಮುನ್ನವೇ ಅವರನ್ನು ಆಂಗ್ಲದ ಮಡಿಲಲ್ಲಿ ಹಾಕಿ 'ಮಮ್ಮಿ' ಎಂದು ಹೇಳಿಸಿ (ಇನ್ನೊಂದು ರೀತಿಯಲ್ಲಿ ಅವರ ಕನ್ನಡಾಭಿಮಾನವನ್ನು ಮಮ್ಮಿ (ಶವ)ಮಾಡಿ )ಆಂಗ್ಲ ಕಲಿಯಲು ಓಂಕಾರ ಹಾಕಿಸಿಬಿಡುತ್ತಾರೆ.. ಹಾಗೆ ಬೆಳೆದ ಮಕ್ಕಳು ಮುಂದೆ 'ಕನ್ನಡ' ತಮ್ಮ ಮಾತೃಭಾಷೆ ಎಂಬುದನ್ನು ಮರೆತು ಕನ್ನಡದ ಬಗ್ಗೆ ತಾತ್ಸಾರ ಹೊಂದುತ್ತಾರೆ.. ಅವರು ವಯಸ್ಕರಾದಂತೆ ಅವರಿಗೆ ಕನ್ನಡ ಅಲರ್ಜಿ ಆಗಿಬಿಡುತ್ತದೆ.. ಶಾಲಾ ಕಾಲೇಜಿನಲ್ಲಿ ಕನ್ನಡ ತರಗತಿ ಎಂದರೆ ಜಿಗುಪ್ಸೆ ಬರುವಂತಾಗುತ್ತದೆ.. ಮುಂದೆ ಮುಂದೆ ಹೋದಂತೆ ಕೆಲ ಉನ್ನತ ಶಿಕ್ಷಣದಲ್ಲಿ ಕನ್ನಡ ವಿಷಯವೇ ಇರುವುದಿಲ್ಲ.. ಚಲಚಿತ್ರಗಳ ವಿಷಯದಲ್ಲೂ ಕೂಡ ಕನ್ನಡಕ್ಕಿಂತ ಆಂಗ್ಲವೇ ಅವರಿಗೆ ಅಚ್ಚುಮೆಚ್ಚಾಗಿ ಪರಿಣಮಿಸುತ್ತದೆ.. ಕನ್ನಡವನ್ನು ಉತ್ತೀರ್ಣವಾಗಲು ಮಾತ್ರ ಓದಬೇಕು ಎಂಬ ಮನೋಜ್ಞಾನ ಅವರಲ್ಲಿ ಮೂಡುತ್ತದೆ... ಕನ್ನಡದ ಜನರು,ಕನ್ನಡದ ಕಾರ್ಯಕ್ರಮಗಳು,ಕನ್ನಡ ಮಾತು ಅವರಿಗೆ ಬೇಸರವೆಂದೆನಿಸುತ್ತದೆ... ಅನಾವಶ್ಯಕವಾಗಿ ಆಂಗ್ಲ ಬಳಸಿ ಕನ್ನಡವನ್ನೇ ಮರೆತುಬಿಡುತ್ತಾರೆ.. ಇಂಥ ಮಕ್ಕಳು ಹುಟ್ಟುವಾಗ ಕನ್ನಡಮ್ಮನ ಮಕ್ಕಳಾಗಿ ಹುಟ್ಟಿದರೂ ಬೆಳೆಯುವುದು ಮಾತ್ರ ಆಂಗ್ಲದ ಪೋಷಣೆಯಲ್ಲಿ..

ಈ ಮಕ್ಕಳನ್ನು ಈ ಸ್ಥಿತಿಗೆ ತಂದ ಜನ್ಮಜರಲ್ಲಿ ಕೆಲವರಂತೂ 'ಕನ್ನಡಿಗ' ಎಂಬ ಹಣೆಪಟ್ಟಿ ಧರಿಸಿ ಕನ್ನಡದ ಸಂಘಟನೆಗಳಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿರುತ್ತಾರೆ... ನಿಮ್ಮ ಮಕ್ಕಳನ್ನು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿ ಮಾತೃಭಾಷೆ ಕಲಿಸಿರುವುದರ ಕಾರಣ ಕೇಳಿದರೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಮುಂದೆ ಡಾಕ್ಟರ್/ಎಂಜಿನಿಯರ್ ಆಗಬೇಕು,ಅದಕ್ಕೆ ಮೂಲ ಆಂಗ್ಲ ಭಾಷೆ ಚೆನ್ನಾಗಿರಬೇಕು... ಎಂದೆನ್ನುತ್ತಾರೆ.. ಅದೂ
ಅಲ್ಲದೆ ತಮ್ಮ ಮಕ್ಕಳು ಹಾಗಾದ್ದಲ್ಲಿ ಕನ್ನಡಕ್ಕೆ ಕೀರ್ತಿ ತಾನೇ! ಎನ್ನುತ್ತಾರೆ?


ಏಕೆ... ಕನ್ನಡ ಮಾಧ್ಯಮದಲ್ಲಿ ಓದಿ ಮಾತೃಭಾಷೆಯನ್ನೂ ಕಲಿತು ಮುಂದೆ ವೈದ್ಯ/ತಂತ್ರಜ್ಞ ರಾಗಿರುವವರಿಲ್ಲವೇ?

ಅವರ ತಂದೆತಾಯಿಯರನ್ನು ಬಿಡಿ ಮಕ್ಕಳಾದರೂ ದೊಡ್ಡವರಾದಮೇಲೆ ತಮ್ಮ ಮಾತೃಭಾಷೆಯ ಬಗ್ಗೆ ತಿಳಿಯಬೇಕು ಅದನ್ನೇ ಬಳಸಬೇಕು,ಅದನ್ನು ಪ್ರೀತಿಸಿ ಬೆಳೆಸಬೇಕು ಎಂಬ ಮನೋಜ್ಞಾನ ಬೆಳೆಸಿಕೊಳ್ಳಬೇಡವೇ..?
ಬಿಡಿ ಕೆಲ ಮಕ್ಕಳಿಗೂ ಅದು ಬೇಕಿರುವುದಿಲ್ಲ .. ಅವರು ಹೆಸರಿಗೆ ಮಾತ್ರ ಕನ್ನಡದವರು ಇನ್ನೆಲ್ಲವೂ ಆಂಗ್ಲಮಯ.. ಅವರನ್ನು
ಪ್ರಶ್ನಿಸಿದರೆ, ಹಾಗಾದರೆ ಕರ್ನಾಟಕದಲ್ಲಿ ಎಲ್ಲರೂ ಕನ್ನಡವನ್ನು ಪ್ರೀತಿಸುವವರೇ ಇದ್ದಾರೆಯೆ? ಎಂಬ ತರ್ಕವಿಲ್ಲದ ಉತ್ತರ ನೀಡುತ್ತಾರೆ. ಅದು ಸರಿಯೇ ಅನ್ನಿ ಕರ್ನಾಟಕದ ಈಗಿನ ಪರಿಸ್ಥಿತಿಯೂ ಹಾಗೆ ಇದೆ.. ಎಲ್ಲವೂ ಆಂಗ್ಲಮಯ.. ಪರಿಸ್ಥಿತಿಯೇ ಹೀಗಿರುವಾಗ ಕನ್ನಡದ ಸ್ಥಿತಿ ಕೇಳಬೇಕೆ..?


ಇನ್ನು ಕನ್ನಡದ ಜನತೆ... ಕೆಲವು ಹಳ್ಳಿಗಾಡಿನ ಪ್ರದೇಶಗಳನ್ನು ಬಿಟ್ಟರೆ(ಅಲ್ಲೂ ಕೂಡ ಕನ್ನಡ ಮತ್ತು ಆಂಗ್ಲ ಮಿಶ್ರಿತವಾಗಿ ಬಳಕೆಯಾಗುತ್ತಿದೆ) ನಗರ ಪ್ರದೇಶದ ಜನರಂತೂ ಕನ್ನಡವನ್ನು ಮರೆತೇಬಿಟ್ಟಿದ್ದಾರೆ... ಆಂಗ್ಲವನ್ನು ಚೆನ್ನಾಗಿ ಅರಿತ ಜನರಿಗೆ ಹಳ್ಳಿಗಾಡಿನ ಕನ್ನಡಿಗರ 'ಕನ್ನಡ ಭಾಷೆ' ಇಷ್ಟವಿಲ್ಲ.. ಅವರಿಗೆ ಆಂಗ್ಲ ಮಾತನಾಡುವವರನ್ನು ಕಂಡರೆ ಅಚ್ಚುಮೆಚ್ಚು..(ಎಷ್ಟೇ ಆದರೂ ಹೊತ್ತ ಕನ್ನಡ ತಾಯಿಗಿಂತ ಸಾಕಿದ ಆಂಗ್ಲವೇ ಮುಖ್ಯವೆನಿಸಿತೇನೋ?) ಹೀಗಾದಾಗ ಹಳ್ಳಿಯ ಆಂಗ್ಲ ಬರದ ಜನರು ಆಂಗ್ಲ ಬರುವ ಜನರ ಮುಂದೆ ತಲೆತಗ್ಗಿಸಲಾಗದೆ ಆಂಗ್ಲ ಕಲಿಯಲು ಮುಂದಾಗಿ ಕನ್ನಡ ಮರೆಯುತ್ತಾರೆ.. ಆಂಗ್ಲ ಮೆರೆಸುತ್ತಾರೆ.. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಬಂದರೂ ಕನ್ನಡ ಮಾತನಾಡಲೂ ಇಚ್ಚಿಸದ ಜನರಿದ್ದಾರೆ.. ಕನ್ನಡನಾಡಿನಲ್ಲಿ ಸಮೃದ್ಧವಾಗಿ ಬದುಕಬೇಕಾದರೆ ಕನ್ನಡ ಮರೆಯಬೇಕು ಎಂಬ ಸ್ಥಿತಿ ತಲುಪುತ್ತಾರೆ..ಕೇವಲ ಕನ್ನಡ ಕಲಿತಿರುವ ಜನರು ಮುಂದೆ ಜೀವನೋದ್ಧಾರಕ್ಕೆ ಆಂಗ್ಲದಲ್ಲಿ ಪರಿಣಿತರಾಗಲೆಬೇಕಾದ ಪರಿಸ್ಥಿತಿ ಇದೆ.. ತಮ್ಮ ನಾಡು,ಭಾಷೆ.. ಎಂದು ಅರಿವಿರುವ ಜನರೇ ಹೀಗಿರುವಾಗ ಹಳ್ಳಿಗಾಡಿನಲ್ಲಿ ಕೇಳಬೇಕೆ? ಅಲ್ಲಿನ ಆಂಗ್ಲ ಎಂದರೇನು ಎಂದು ತಿಳಿಯದವರು ಕೂಡ ತಮ್ಮ ಮಕ್ಕಳು ಆಂಗ್ಲ ಕಲಿಯಲೆಂದು ಇಚ್ಛೆ ಪಟ್ಟು ಆಂಗ್ಲ ಕಲಿಯಲು ಬಿಡುತ್ತಾರೆ,ತಮ್ಮ ಮಗು ಒಂದೆರಡು ಆಂಗ್ಲ ಪದ ಕಲಿತರೆ ಅದೇ ಅವರಿಗೆ ಖುಷಿಯ ವಿಷಯ.. ಅವರಿಗೂ ತಮ್ಮ ಮಗು ಆಂಗ್ಲ ಮಾಧ್ಯಮ ಶಾಲೆಯಲ್ಲೇ ಓದಬೇಕೆಂಬ ಆಸೆ..
ಹೀಗಾಗಿ ಕನ್ನಡದಲ್ಲಿರುವ ಕನ್ನಡದ ಮುತ್ತು ಮಣಿಗಳೂ ಕನ್ನಡದ ಮಣ್ಣಿನಲ್ಲಿ ಕನ್ನಡವೇ ಹೂತುಹೋಗುತ್ತಿರುವುದ ನೋಡಿ ಕಂಬನಿ ಮಿಡಿಯುತ್ತಾರೆ...


ಸಂಪರ್ಕ ಸಾಧನವಾದ ಚಲನ ದೂರವಾಣಿ (ಮೊಬೈಲ್ ಫೋನ್ )ಅನ್ನೇ ತೆಗೆದುಕೊಳ್ಳಿ.. ಎಷ್ಟು ರೀತಿಯಲ್ಲಿ ಅವು ನಮಗೆ ಕಾಣಸಿಗುತ್ತವೆ, ಆದರೆ ಕನ್ನಡ ಅಕ್ಷರಕ್ಕೆ ಸ್ಪಂದಿಸುವ ಚಲನ ದೂರವಾಣಿ ಒಂದೆರಡು ಅಷ್ಟೆ..
ಅವುಗಳನ್ನು ಉಪಯೋಗಿಸುವ ಕನ್ನಡ ಜನರಿಗೆ ಕನ್ನಡದಲ್ಲಿ ಸಂದೇಶ ರವಾನೆಗೆ ಅವಕಾಶವೇ ಇಲ್ಲ.. ಕನ್ನಡದ ಹಬ್ಬದ ಶುಭಾಶಯ ಕೂಡ ಆಂಗ್ಲದಲ್ಲೇ ತಲುಪಿಸುತ್ತಾರೆ..

ಇನ್ನೂ ಕೆಲ ವಿಷಯಗಳಂತೂ .... ! ಕನ್ನಡ ಪಾಠ ಹೇಳುವ ಕೆಲ ಕನ್ನಡ ಉಪನ್ಯಾಸಕರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ... ಕೆಲ ಕನ್ನಡ ಉಪನ್ಯಾಸಕರು ಮಾತನಾಡುವುದು ಕೇವಲ ಆಂಗ್ಲದಲ್ಲಿ(ಅವರಿಗೆ ಕನ್ನಡ ಬರುತ್ತೋ.. ಅಥವಾ ಬೇಕೆಂತಲೇ ಆಂಗ್ಲ ಮಾತನಾಡುತ್ತಾರೋ? ತಿಳಿಯದು).. ಕನ್ನಡದಲ್ಲಿ ವಾಹನಗಳಿಗೆ ಸಂಖ್ಯೆ ಬರೆಯಿಸಿದರೆ ಓದಲು ಬಾರದ ಕೆಲ ಸಂಚಾರ ನಿಯಂತ್ರಣ ರಕ್ಷಕರೂ ಇದ್ದಾರೆ.. ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜ ಹಾರಿಸುವವರಿಗೆ ಸಂಪೂರ್ಣ ಕನ್ನಡ ಬಾರದೆಯೂ ಇರಬಹುದೆಂದು ನನ್ನ ಅನಿಸಿಕೆ....

ಒಂದು ನಾಡಿನಲ್ಲಿ ಆ ನಾಡಿನ ಭಾಷೆಯ ಶಾಲೆಗಳು ಹೆಚ್ಚಾಗಿರಬೇಕು.. ಕನ್ನಡ ಭೂಮಿಯಲ್ಲಿ ಕನ್ನಡ ಶಾಲೆಗಳಿಗಿಂತ ಆಂಗ್ಲ ಶಾಲೆಗಳೇ ಹೆಚ್ಚಿವೆ ... ಕೇವಲ ಕನ್ನಡ ಕಲಿತಿರುವ ಜನರು ಮುಂದೆ ಜೀವನೋದ್ಧಾರಕ್ಕೆ ಆಂಗ್ಲದಲ್ಲಿ ಪರಿಣಿತ ಆಗಲೇಬೇಕಾದ ಪರಿಸ್ಥಿತಿ ಇದೆ..

'ಕನ್ನಡ ನನ್ನ ಉಸಿರು','ಕನ್ನಡವೇ ಸತ್ಯ ಕನ್ನಡವೇ ನಿತ್ಯ','.......ಮುಂತಾದ ಕನ್ನಡ ಬರಹಗಳು.. ಇಂಥ ಮಾತಾಡುವ ಜನರೆಂದರೆ ನಕ್ಕು ಬಿಡುವ ಈ ನಾಡಲ್ಲಿ 'ಮಾತೃ ಪ್ರೇಮ' ಉಕ್ಕಿಸುವೆ ಎಂದು ಹೇಳುವವನು ಹುಚ್ಚನಾಗಬಹುದು..

ಇನ್ನೂ ಕನ್ನಡ ಸಂಸ್ಕೃತಿ ಬಗ್ಗೆ ಹೇಳಬೇಕೆ? ಗಂಡು ಮಕ್ಕಳಂತೆ ಬಟ್ಟೆ ಧರಿಸಿ ನಾನು ಗಂಡಿಗಿಂತ ಕಡಿಮೆಯಿಲ್ಲ ಎಂದು ಸ್ಪರ್ಧಿಸಲು ನಿಂತಿರುವ ಹೆಣ್ಣುಮಕ್ಕಳು ಹೆಚ್ಚಿದ್ದಾರೆ.. ಕನ್ನಡತಿಯಂತೆ ಕಾಣುವ ಹೆಣ್ಣು ಮಕ್ಕಳು ಎಲ್ಲಿದ್ದಾರೋ? ಇದುವರೆಗೆ ಅಲ್ಪಸ್ವಲ್ಪ ಕನ್ನಡ ಉಳಿದಿರುವ ಹಳ್ಳಿಗಾಡಿನ ಪ್ರದೇಶದಲ್ಲೂ ನಾನು ಅವರನ್ನು ನೋಡಿಲ್ಲ.. ಇಲ್ಲೇ ಹೀಗೆ ಎಂದರೆ ನಗರ ಮುಂದುವರಿದ ನಗರ ಪ್ರದೇಶದಲ್ಲಿ..? ಇನ್ನೂ ಮುಂತಾದ ಸಂಸ್ಕೃತಿಗೆ ಧಕ್ಕೆ ತರುವ ಕಾರ್ಯಗಳಿವೆ...

ಇಲ್ಲಿ ಕೆಲವು ಕಠಿಣ ಕನ್ನಡ ಪದಗಳನ್ನು ಬರೆಯಲು ಬಾರದವರಿದ್ದಾರೆ.. ಕನ್ನಡ ಧ್ವಜವನ್ನೇ ನೋಡದವರಿದ್ದಾರೆ.. ಕನ್ನಡವೇ ಬೇಡ ಎನ್ನುವ ತಂದೆ-ತಾಯಿಯರಿದ್ದಾರೆ,ಮಕ್ಕಳಿದ್ದಾರೆ.. ಮತ್ತೊಂದು ವಿಷಯ.. ಹಲವಾರು ಕನ್ನಡ ಬ್ಲಾಗಿಗರು ನಮ್ಮಲ್ಲಿದ್ದಾರೆ.. ನಾನು ನೋಡಿದ ಶೇಕಡ ೮೮ ಬ್ಲಾಗಿನಲ್ಲಿ ಕನ್ನಡ ಪದಗಳು ತಪ್ಪು ತಪ್ಪಾಗಿ ಮೂಡಿಬರುತ್ತಿವೆ..

ಇದು ಯಾರ ತಪ್ಪು? ಯಾರ ಶಾಪ? ಯಾರ ಪಾಪ? ಯಾರ ಪುಣ್ಯ?

ಹೀಗಿರುವಾಗ ಪಂಚಕೋಟಿ ಜನರಿರುವ ಕನ್ನಡನಾಡಿನಲ್ಲಿ ನಿಜವಾದ ಕನ್ನಡಿಗರೆಷ್ಟು?


ನಾನು ಬಹಳಷ್ಟು ಕನ್ನಡ ಬ್ಲಾಗಿಗರು ಈ ಬರಹ ಓದಬೇಕೆಂಬ ಸಣ್ಣ ಆಸೆ ಇಟ್ಟುಕೊಂಡಿದ್ದೇನೆ,ದಯವಿಟ್ಟು ಇದನ್ನು ಓದಿದವರು ನಿಮ್ಮ ನೆರೆಯ ಬ್ಲಾಗಿಗರಿಗೂ ತಿಳಿಸುವಿರಾ...

ಮತ್ತೊಮ್ಮೆ ಅಮೋಘವಾಗಿ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು"

ಮತ್ತೊಮ್ಮೆ "ಕನ್ನಡ ರಾಜ್ಯೋತ್ಸವದ ಶುಭಾಷಯ" ತಿಳಿಸುತ್ತಾ ವಂದಿಸುತ್ತೇನೆ.

--ಧನ್ಯವಾದಗಳು..

ಮಂಗಳವಾರ, ಸೆಪ್ಟೆಂಬರ್ 8, 2009

ಒಂದು ಕನಸಿನ ಸುತ್ತಾ...

ನನ್ನೆಲ್ಲ ಕನ್ನಡಭಿಮಾನಿ ದೇವರುಗಳಿಗೆ ನಮಸ್ತೆ...

ಹೇಳಬೇಕೆಂದರೆ ನಾನು ಪಕ್ಕಾ ಹಳ್ಳಿ ಹುಡ್ಗ ಕಣ್ರೀ...ಈ ಇಂಟರ್ನೆಟ್,ಬ್ಲಾಗ್ ಇವೆಲ್ಲ ಏನು ಗೊತ್ತಿಲ್ದೆ ಇರೋ ಹುಡ್ಗ ನಾನಾಗಬೇಕಿತ್ತು.. ಎಸ್.ಎಸ್.ಎಲ್.ಸಿ. ಪಾಸ್ ಆದ ಮೇಲೆ ನಾನು, ನಮ್ಮೂರ ಹುಡ್ಗರು,ಬಸ್ಸು,ಕಾಲೇಜು,ಹೊಲ,ಮನೆ... ಇಷ್ಟರಲ್ಲೇ ಎಲ್ಲ ಜೀವನ ಮುಗಿದುಹೋಗುತ್ತೆ ಅಂದುಕೊಂಡಿದ್ದೆ. ಆದರೆ ವಿಧಿಲಿಖಿತನೆ ಬೇರೆ ಇತ್ತು..

ಅನಿರೀಕ್ಷಿತವಾಗಿ ನಮ್ಮ ಕುಟುಂಬ ಸಮೇತ ಎಲ್ಲರೂ ಹುಟ್ಟೂರನ್ನು ಬಿಟ್ಟು ಸಿಟಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸ ಇದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸಬೇಕಾದ ಪರಿಸ್ಥಿತಿ ಬಂತು... ಇದೇ ನಿಟ್ಟಿನಲ್ಲಿ ಇರಬೇಕಾದ್ರೆ ಅಲ್ಲಿನ ವಾತಾವರಣಕ್ಕೆ ಹೊಂದುಕೊಂಡಂತೆ ನನಗೆ ಇಂಟರ್ನೆಟ್-ಆರ್ಕುಟ್ ಪರಿಚಯ ಆಯ್ತು.. ಆಗ ಇದುವರೆಗೂ ಅಪರಿಚಿತರಾಗೆ ಇದ್ದ ಒಬ್ಬ ವ್ಯಕ್ತಿ ಆರ್ಕುಟ್ ಮೂಲಕ ಮೊದಲ ಬಾರಿಗೆ ಪರಿಚಿತರಾದರು.. ಅವರು ಒಬ್ಬ ಭಾವುಕ ಜೀವಿ ....

ನನಗೆ ಬೇಸರವಾಗಿ ನಾನು ಆರ್ಕುಟ್ ಡಿಲೀಟ್ ಮಾಡಿದಾಗ ಅವ್ರೆ ಫೋನ್ ಮಾಡಿ ಹೀಗೆಲ್ಲ ಬೇಸರ ಮಾಡಿಕೊಳ್ಳಬಾರದು ಎಂದು ಧೈರ್ಯ ತುಂಬಿ ಮತ್ತೆ ಹೊಸ ಆರ್ಕುಟ್ ಮಾಡಿಸಿದರು.. ಅಂದಿನಿಂದ ಇಬ್ರು ತುಂಬಾನೇ ಹತ್ತಿರವಾಗುತ್ತ ಹೋದ್ವಿ.. ನಾನು ಯಾರ ಹತ್ತಿರನೂ ಹೇಳಿಕೊಳ್ಳಲಾಗದ ಕೆಲವು ವಿಷಯಗಳನ್ನು ಅವರ ಹತ್ತಿರ ಹೇಳಿಕೊಂಡು.. ಅವರ ಮನಸ್ಸಿಗೆ ಹತ್ತಿರವಾಗುತ್ತ ಹೋದಂತೆ ಅವರ ಮನಸ್ಸಿನ ಬಿರುಕುಗಳನ್ನೂ ನನಗೆ ತೋರಿಸಿದರು.. ಅವರ ಹುಟ್ಟುಹಬ್ಬದ ದಿನ ನನಗೆ ಒಂದು ಕಾಣಿಕೆ ಕೊಡುತ್ತೇನೆಂದು ಹೇಳಿ ಅವರ ಬ್ಲಾಗ್ ವಿಳಾಸ ಕೊಟ್ಟರು.. ಅಲ್ಲಿವರೆಗೂ ನನಗೆ ಬ್ಲಾಗ್ ಬಗ್ಗೆ ಗೊತ್ತೇ ಇರಲಿಲ್ಲ... ಅವ್ರು ಬ್ಲಾಗ್ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟು ನನ್ನನ್ನೂ ಬ್ಲಾಗ್ ಮಾಡುವಂತೆ ಪ್ರೇರೇಪಿಸಿದರು.. ನಂಗೆ ಆ ವಿಷಯ ಮೊದಮೊದಲು ನಾನು ಬರೆಯುತ್ತೇನ,ನಂಗೆ ಬರವಣಿಗೆ ಕೌಶಲ್ಯ ಇದೆಯಾ? ಎಂದು ಹಾಸ್ಯ ಅನಿಸಿದರೂ ಮತ್ತೆ ಮತ್ತೆ ಅವ್ರ ಮಾತಿನಿಂದ ಉತ್ತೇಜಿತನಾಗಿ ಬ್ಲಾಗ್ ಮಾಡೋಣ ಅಂದುಕೊಂಡೆ.. ಸ್ವಲ್ಪ ದಿನಗಳ ನಂತರ ಅವರ ಬ್ಲಾಗ್ ಕನ್ನಡಪ್ರಭದ ಬ್ಲಾಗಾಯಣದಲ್ಲಿ ಬಂದಿದ್ದು ನಂಗೆ ಇನ್ನಷ್ಟು ಹುಮ್ಮಸ್ಸು ಸಿಗುವಂತಾಯ್ತು ..

ಹೀಗಿರುವಾಗ ಒಮ್ಮೆ ಮಂಡ್ಯದಲ್ಲಿ ನಮ್ಮಿಬ್ಬರ ಭೇಟಿ ಕೂಡ ಆಯ್ತು,ಆಗ ಅವರು ನನಗೆ ಒಂದು ಲೇಖನಿಯನ್ನು ಕಾಣಿಕೆಯಾಗಿ ಕೊಟ್ಟಿದ್ದರು (ಅದು ಲೇಖನಿಯೆಂದು ಗೊತ್ತಾಗಿದ್ದು ಮನೆಗೆ ಹೋಗಿ ಪ್ಯಾಕ್ ತೆರೆದು ನೋಡಿದಾಗಲೇ..!). ಅಂದು ನನಗೆ ಅವರು ಆದಷ್ಟು ಬೇಗ ಒಂದು ಬ್ಲಾಗ್ ಮಾಡು ಒಳ್ಳೆ ಹೆಸರು ಇರುತ್ತೆ ಎಂದು ಹೇಳಿದರು.. ಆಗ ನಾನು ಕೂಡ ಹೇಳಿದೆ: ಮಾಡೇ ಮಾಡುತ್ತೇನೆ ಮುಂದೊಂದು ದಿನ ನಿಮ್ಮ ಬ್ಲಾಗ್ ನಂತೆ ಬ್ಲಾಗಾಯಣದಲ್ಲಿ ಬರೋ ರೀತಿ ಬರೆಯುತ್ತೇನೆ.. ಎಂದು ಹೇಳಿ ಅವತ್ತಿನಿಂದಲೇ "ಮುಂದೆ ಬ್ಲಾಗ್ ಎಂಬ ಕೀರ್ತಿ- ಹಿಂದೆ ಗುರುವಾಗಿ ಆ ದಿವ್ಯಮೂರ್ತಿ " ಎಂದುಕೊಂಡು ಅವರು ಕೊಟ್ಟ ಲೇಖನಿಯ ಮೇಲೆಯೇ ಮೊಟ್ಟಮೊದಲ ಕವನ "ಬರೆಯಲಾರೆನು ಗುರುವೇ ನೀ ಕೊಟ್ಟ ಲೇಖನಿಯಲ್ಲಿ' ಬರೆದೆ..

[ನಾನು ಅಂದು ಹೇಳಿದಂತೆ ಇಂದು ಬ್ಲಾಗ್ ಕೂಡ ಮಾಡಿದ್ದೇನೆ..ಆದರೆ ನಾನು ಬಹಳ ಕಷ್ಟಪಟ್ಟು ಬರೆದ ಕೆಲವು ಕವನಗಳಿಗೆ ಯಾರ ಅಭಿಪ್ರಾಯವೂ ಬರದೆ ಬೇಸರವಾಗಿ ನನ್ನ ಬ್ಲಾಗಿಗೆ ಜನಪ್ರಿಯ ಆಗೋಲ್ಲ ಎಂದುಕೊಂಡು ಬ್ಲಾಗ್ ಅನ್ನು ಡಿಲೀಟ್ ಮಾಡಿ ಬೇರೇ ತೆರೆಯೋಣ ಅನ್ನಿಸಿತ್ತು..]

ಅದರೆ ಜುಲೈ ೧ ೨೦೦೯ ರಂದು ನನ್ನ ಬ್ಲಾಗ್ ಕನ್ನಡಪ್ರಭದ ಬ್ಲಾಗಾಯಣದಲ್ಲೂ ಬಂದಿದೆ.. ನಂಗೆ ತುಂಬಾ ಖುಷಿ ಆಗುತ್ತಿದೆ,ಯಾವುದೋ ಒಂದು ಕನಸು ನೆನಸಾದಂತೆ ಕಾಣುತ್ತಿದೆ.ಈಗ ನನ್ನ ಮನಸು ಬದಲಾಗಿದೆ,ಇನ್ನು ನಾನು ಈ ಬ್ಲಾಗ್ ಅನ್ನು ತೆಗೆಯಬಾರದು ಎಂದುಕೊಂಡಿದ್ದೇನೆ...

ನನ್ನ ಬ್ಲಾಗ್ ಬ್ಲಾಗಾಯಣದಲ್ಲಿ ಬಂದಿರುವ ವಿಷಯವನ್ನು ನನಗೆ ತಿಳಿಸಿದವರು ನನಗೆ ಬ್ಲಾಗ್ ಬಗ್ಗೆ ತಿಳಿಸಿಕೊಟ್ಟ ಅದೇ ಆಪ್ತರು.. ಅವರಿಗೆ ನನ್ನ ತುಂಬುಹೃದಯದ ಧನ್ಯವಾದಗಳು..ಜೊತೆಗೆ ನನ್ನಿಷ್ಟ ಬಂದಂತೆ ಗೀಚಿದ್ದ ನನ್ನ ಬ್ಲಾಗನ್ನು ಗುರುತಿಸಿ ಪ್ರಕಟಿಸಿದ ಕನ್ನಡಪ್ರಭದ ಸಂಪಾದಕವರ್ಗದವರಿಗೂ ಹೃತ್ಪೂರ್ವಕ ವಂದಿಸುತ್ತೇನೆ..ನನಗೆ ಬ್ಲಾಗ್ ಎಂಬುದರ ಬಗ್ಗೆ ಅರಿವು ಮೂಡಿಸಿ ನನ್ನಲ್ಲಿನ ಬರವಣಿಗೆ ಕೌಶಲ್ಯವನ್ನು ಹೊರತಂದ ನನ್ನ ಆಪ್ತರಿಗೆ ಮತ್ತೊಮ್ಮೆ ಹೃತ್ಪೂರ್ವಕ ವಂದಿಸುತ್ತೇನೆ.....

ಬುಧವಾರ, ಜುಲೈ 29, 2009

'ನೆನಪನಾಲೆ '

ಅಮ್ಮ ದೃಷ್ಟಿ ತೆಗೆಯುವಾಗ ಸುಡುವ ಬಟ್ಟೆಯು ಹಾಯತಪ್ಪಿ ಕಾಲಮೇಲೆ ಬಿದ್ದು ಗಾಯ ಆಗಿರೋದು,ಅಪ್ಪ ಕೈ ಹಿಡಿದು ಬರೆಸುತ್ತಿದ್ದುದು,ನಾನು ಓದುತ್ತಿದ್ದ ಶಿಶುವಿಹಾರದ ಟೀಚರ್ ಕಂಡ ಕೂಡಲೇ ಅಡಗಿ ಕೂರುತ್ತಿದ್ದುದು,ಮನೆಮುಂದೆ ಕೂರುತ್ತಿದ್ದ ಹಿರಿಯರಿಗೆಲ್ಲ ಲಾರಿ ತಂದು ಹಾಯಿಸುವೆನೆಂದು ಬೆದರಿಕೆ ಹಾಕುತ್ತಿದ್ದುದು, ತಿಳಿಯದೆ ನಾಣ್ಯ ನುಂಗಿದ್ದು.....
ಅಪ್ಪ ಅವರು ಕೆಲಸ ಮಾಡುವ ಶಾಲೆಗೆ ಕರೆದುಕೊಂಡು ಹೋದಾಗ ಅಲ್ಲಿಯ ಪ್ರಾಂಶುಪಾಲರು ನನ್ನ ಪ್ರತಿಭೆ ಮೆಚ್ಚಿ ೫೦೦/- ರೂ. ಕೊಟ್ಟಿದ್ದು,ಯಾರೋ ಆಹಾರದಲ್ಲಿ ಮದ್ದು ಬೆರೆಸಿ ಕೊಟ್ಟು ಆರೋಗ್ಯ ಹದಗೆಟ್ಟಿದ್ದು,.....
ಪ್ರಾಥಮಿಕ ಶಾಲೆಗೆ ಸೇರಿದ್ದು,ಪ್ರತಿಭಾವಂತನೆಂದು ಹೆಸರು ಗಳಿಸಿದ್ದು,ಎಲ್ಲ ಮಾಸ್ತರರನ್ನು ಹಚ್ಚಿಕೊಂಡಿದ್ದು,ಗೋಲಿ ಆಡಿದ್ದು,ಚಿತ್ರನಟಿಯರನ್ನು ಪ್ರೀತಿಸಿದ್ದು,ಅಕ್ಕನ ಮಗಳನ್ನು ಮುದ್ದಾಡಿದ್ದು,.....
ಹೈಸ್ಕೂಲಿಗೆ ಸೇರಿದ್ದು,ಪೋಲಿ ಹುಡುಗರ ಸಹವಾಸ ಸೇರಿದ್ದು, ಜೊತೆಗೆ ವ್ಯವಸಾಯದ ಬೆನ್ನಿಗೆ ಬಿದ್ದಿದ್ದು,ರಜಾದಿನದಲ್ಲಿ ಆಡು ಮೇಯಿಸಲು ಹೋದಾಗ ಈಜು ಹೊಡೆಯುತ್ತಿದ್ದುದು,ರೈಲ್ವೆ ಹಳಿಯಲ್ಲಿ ಕಬ್ಬಿಣ ಹಾಯುತ್ತಿದ್ದುದು,ಇಸ್ಪೀಟ್ ಆಟ ಆಡುತ್ತಿದುದು,ಮುಂಜಾನೆಯೇ ಎದ್ದು ಹೊಲಕ್ಕೆ ನೀರು ಹಾಯಿಸುತ್ತಿದ್ದುದು.....
ಶಾಲೆಯಲ್ಲಿ ಮಾಸ್ತರರನ್ನು ರೇಗಿಸಿದ್ದು,ಬೆಂಚಿನ ಮೇಲೆ ಕೆತ್ತಿದ್ದು,ಅಹಂಕಾರಿ ಎಂಬ ಪಟ್ಟ ಪಡೆದಿದ್ದುದು,ಪ್ರತಿ ಸಭೆ ಸಮಾರಂಭದಲ್ಲೂ ಭಾಷಣ ಮಾಡುತ್ತಿದ್ದುದು,ಓದದಿದ್ದರೂ ಅಂಕ ಪಡೆಯುವ ಸಾಮರ್ಥ್ಯ ಪಡೆದು ಭೇಷ್ ಎನಿಸಿಕೊಂಡಿದ್ದುದು.....
ಒಂದು ಹುಡುಗಿಗೆ ಆಕೆಯ ಸ್ನೇಹಿತೆಯ ಮೂಲಕ ಪ್ರಪೋಸ್ ಮಾಡಿ ಒಪ್ಪಿಸಿ ಪ್ರೀತಿ ಮಾಡಿದ್ದು,ಪ್ರತಿದಿನ ಪ್ರೇಮಪತ್ರ ಕೊಡುತ್ತಿದ್ದುದು, ನಾನು ಇನ್ನೊಬ್ಬಳನ್ನು ಪ್ರೀತಿಸುವ ವಿಷಯ ತಿಳಿದು ಆಕೆ ಮುನಿಸಿಕೊಳ್ಳುತ್ತಿದ್ದುದು..
ಮತ್ತೆ ಮತ್ತೆ ಜಗಳ ಅಡಿ ಒಂದಾಗುತ್ತಿದ್ದುದು,ಪ್ರೇಮದ ಕಾಣಿಕೆ ನೀಡುತ್ತಿದ್ದುದು.....
ಮೊದಲ ಬಾರಿಗೆ ಸೆಕ್ಸ್ ಬುಕ್ ಓದಿದ್ದು,ಹಸ್ತಮೈಥುನ ಮಾಡಿಕೊಂಡದ್ದು,ಲೈಂಗಿಕತೆಯ ಬಗ್ಗೆ ತಲೆಕೆಡಿಸಿಕೊಂಡು ಹೆಚ್ಚು ಹಾಳಾಗಿದ್ದುದು,ಓದೋದು ಬಿಟ್ಟರೂ ಉತ್ತಮ ಅಂಕವನ್ನೇ ಪಡೆದುಕೊಂಡದ್ದು.....
ಚೆನ್ನಾಗಿ ಓದಬೇಕೆಂಬ ಹಂಬಲದಿಂದ ಕಾಲೇಜು ಸೇರಿ ಓದುತ್ತಿದ್ದುದು, ಮೊದಮೊದಲು ಅಪರಿಚಿತರ ನಡುವೆಯೇ ಸಾಗಿದ್ದುದು,ಮುಗ್ದನಾಗಿ ಶ್ರಮಪಟ್ಟು ಓದಿ ಕಾಲೇಜಿನವರಿಂದ ಶಹಬ್ಬಾಸ್ ಗಿರಿ ಪಡೆದಿದ್ದುದು,ನಾನಾಯ್ತು ನನ್ನ ಪುಸ್ತಕ ಆಯ್ತು ಎಂದು ಇದ್ದುದು,ಹಲವಾರು ಕನಸು ಕಂಡಿದ್ದುದು, ಕಾಲೇಜಿನವರು ಅತ್ಯುತ್ತಮ ದರ್ಜೆಯಲ್ಲಿ ತೇರ್ಗಡೆ ಆಗುವ ವಿದ್ಯಾರ್ಥಿ ಪಟ್ಟಿಯಲ್ಲಿ ನಾನು ಒಬ್ಬನಾದದ್ದು.....
ಮೀಸೆ ಚಿಗುರಿದ್ದು, ಕಾಲಕ್ರಮೇಣ ಹುಡುಗರ ಸಹವಾಸ ಸೇರಿದ್ದು, ಹಳೆ ಚಾಳಿ ಮುಂದುವರೆಸಿದ್ದು,ಕಾಲೇಜಿನಲ್ಲಿ ಉಪನ್ಯಾಸಕರನ್ನು ರೇಗಿಸಿದ್ದು,ಹುಡುಗಿಯರ ಹಿಂದೆ ಅಲೆದಿದ್ದುದು, ಓದುವುದು ಕಡಿಮೆ ಮಾಡಿ ಹಾಳಾಗಿದ್ದುದು.. ಆದ್ರೂ ಉತ್ತಮ ಅಂಕವನ್ನೇ ಪಡೆದಿದ್ದುದು.....

'ರಾಹುದೆಸೆ' ಶುರು ಆದದ್ದು ..

ಮೊದಲಬಾರಿಗೆ ಬ್ಲೂ ಫಿಲಂ ನೋಡಿದ್ದು, ಮತ್ತೆ ಮತ್ತೆ ನೋಡಬೇಕೆನಿಸಿ ಕಾಲೇಜು ನಿಲ್ಲಿಸಿ ನೋಡಿದ್ದು, ಅಂತರ್ಜಾಲಕ್ಕೆ ಕಾಲಿಟ್ಟಿದ್ದುದು, ಬ್ಲಾಗ್ ಪರಿಚಯ ಆಗಿ ಬ್ಲಾಗ್ ಬರೆದುದು, ಸ್ನೇಹಿತರ ಜೊತೆಗೂಡಿ ಕಾಲೇಜಿಗೆ ಬಂಕ್ ಹಾಕಿ ಫಿಲಂ ಗೆ ಹೋಗಿದ್ದುದು, ಮನೆ ಪಾಠಗಳಲ್ಲಿ ಓದುವುದಕ್ಕಿಂತ ಹೆಚ್ಚು ಆಟ ಆಡಿದ್ದು, ಬೈಕ್ ಏರಿ ಹುಡುಗಿಯರನ್ನು ಚುಡಾಯಿಸಿ ಪೋಲೀಸರ ಕಣ್ತಪ್ಪಿಸಿ ಓಡಿದ್ದುದು, ಹಲವಾರು ಗಲಾಟೆಗಳಲ್ಲಿ ಪಾಲುಗೊಂಡದ್ದು, ಮಂಡ್ಯ ಪೋಲಿಗಳಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದು..
ಅದ್ದೂರಿ ಆಗಿದ್ದ ಜೀವನ ಹಾಳಾಗಿದ್ದು, ಓದು ಬಿಟ್ಟು ನಪಾಸು ಆಗುವೆನೆಂದು ನಂಬಿದ್ದರೂ ದೇವರ ದಯೆಯಿಂದ ಉತ್ತಮ ಅಂಕ ಪಡೆದಿದ್ದು.....
ಕಡಿಮೆ ಅಂಕ ತೆಗೆದಿದ್ದಕ್ಕೆ ಮನೆಯವರಿಂದ ,ಕಾಲೇಜಿನವರಿಂದ ಬೈಸಿಕೊಂಡದ್ದು.. ಪಶ್ಚಾತ್ತಾಪ ಪಟ್ಟಿದ್ದು,ತಪ್ಪುಗಳು ಅರಿವಾದದ್ದು.....
ಹೊಸಕನಸು ಹೊತ್ತಿ ಈಗ ತಾನೇ ಡಿಗ್ರಿ ಸೇರಿ ಹೊಸ ಜೀವನ ಪ್ರಾರಂಭಿಸಿರುವುದು.....

ಇಂತ ಹಲವಾರು ಹನಿಹನಿ ನೆನಪುಗಳು ಇನ್ನು ನನ್ನ ಕಣ್ಣೆದುರಲ್ಲೇ ಇರುವಾಗ, ಹಿರಿಯರ ಮುಂದೆ ಬಾಲಕ ಎಂದು ಇರುವಾಗ ನನಗೆ ಇದೇ ಜುಲೈ ೨೯ ಕ್ಕೆ ಆಗಲೇ ಹದಿನೆಂಟು ವರ್ಷಗಳಾದ ಸಂಭ್ರಮ.....

ಆಗಲೇ ದೊಡ್ದವನಾದೆನ ಎಂಬ ಕುತೂಹಲ, ಜವಾಬ್ದಾರಿಗಳು ಶುರುವಾಗುವುವೇನೋ ಎಂಬ ಕಾತಾಳ.....

ಹಲವಾರು ಕನಸು ಕಾಣುತ್ತ ಹದಿನೆಂಟರ ಹರೆಯದಲ್ಲಿ ಬಿಸಿನೆತ್ತರ ದೇಹವನ್ನು ಹಿಡಿತದಲ್ಲಿಟ್ಟು, ಇನ್ನು ಮುಂದೆಯಾದರೂ ಹೊಸ ಜೀವನ ಪ್ರಾರಂಭಿಸೋಣ ಎಂದುಕೊಂಡು ನವಚೈತನ್ಯದಲ್ಲಿ ನವಘಳಿಗೆಗೆ ಕಾಲಿಡುತ್ತಿರುವ ನನಗೆ ಭಗವಂತನಾದಿಯಾಗಿ ತಮ್ಮೆಲ್ಲರ ಆಶಿರ್ವಾದ ಸದಾ ಇರಲಿ.....


ಇಂತಿ,
ನಿಮ್ಮ ಆಶೀರ್ವಾದದ ನಿರೀಕ್ಷೆಯಲ್ಲಿರುವಾತ...

ಬುಧವಾರ, ಏಪ್ರಿಲ್ 1, 2009

ವಿಧಿಸ್ವತ್ತಿನ ಮುನ್ನುಡಿ ಬರಹ

ನನ್ನ ಕಥೆ ಕೇಳಿದರೆ ಕಿವಿಯಲ್ಲಿ ರಕ್ತ ಬರಬಹುದು,ನನ್ನ ಕಥೆ ಓದಿದರೆ ಕಣ್ಣಲ್ಲಿ ರಕ್ತ ಬರಬಹುದು ಅಂತ ದುರಂತಕಥಾನಾಯಕ ನಾನು.

ಅದಕ್ಕಾಗಿ ಕೇವಲ ಮುನ್ನುಡಿಯನ್ನು ಮಾತ್ರ ನಿಮ್ಮ ಮುಂದಿಡುತ್ತಿರುವ ನೇರ-ನಿಷ್ಠುರ ನುಡಿಯ ಬಲಿಪಶು!
ವಿಧಿಸ್ವತ್ತಿನ ಮುನ್ನುಡಿ ಬರಹ:ನಾನು ಕೂಡ ಎಲ್ಲರಂತೆಯೇ ಏನೂ ಅರಿಯದ ಮುಗ್ದ ಮಗುವಿನಂತೆ ಈ ಭೂಮಿಗೆ ಬಂದೆ.ಬೆಳೆದಂತೆ ಆ ದೇವರು ಎಲ್ಲರಿಗೂ ನೀಡೋ ಹಾಗೆ ನನಗೂ ಅರಿಷಡ್ವರ್ಗಗಳಾದ ಕಾಮ,ಕ್ರೋಧ,ಮದ,ಮತ್ಸರ,ಮೋಹ ಮತ್ತು ಲೋಭ ಎಂಬ ಆರು ಹುಚ್ಚು ಕುದುರೆಗಳನ್ನು ಕಟ್ಟಿದ ಮನಸ್ಸು ಎಂಬ ರಥವನ್ನು ನೀಡಿದ.ಆದರೆ ಎಲ್ಲರಿಗೂ ಆ ರಥಕ್ಕೆ ಲಗಾಮು ನೀಡೋ ಹಾಗೆ ನನ್ನ ರಥಕ್ಕೆ ಲಗಾಮು ನೀಡುವುದನ್ನು ಆ ದೇವರು ಬಹುಶಃ ಮರೆತ ಅಂತ ಕಾಣುತ್ತೆ.ಜೊತೆಗೆ ವಿದ್ಯೆ ಮತ್ತು ಹಣವನ್ನು ನೀಡಿದ್ದ.! ಇವೆಲ್ಲ ಇರುವವನು ಹೇಗಿರಬಹುದು ಎಂದು ನೀವೇ ಊಹಿಸಿ.

ಒಂದು ಸುಂದರ ಓದೋ ಹುಡುಗಿ ನನ್ನ ಕಣ್ಣಿಗೆ ಬಿದ್ದಾಗ ನನ್ನ ವಿದ್ಯೆ ಅವಳಿಗಿಂತ ಮುಂದಿರಬೇಕು ಅಂತ ಹೇಳಿದರೆ ನನ್ನಲ್ಲಿ ಇದ್ದ ಅರಿಷಡ್ವರ್ಗಗಳು ಅವಳ ಮೋಹಕ ಚೆಲುವಿನ ಬಯಕೆಗೆ ಕಿಚ್ಚಿಡುತ್ತಿದ್ದವು, ಒಂದರ್ಥದಲ್ಲಿ ನಾನು "ಕಾಮತುರಾಣಾನಾಂ ಭಯಾನಂ ಲಜ್ಜಾಂ !" ಎಂಬಂತೆ ಆಗಿದ್ದೆ ಅನಿಸುತ್ತೆ.ಆದರೂ ಆ ದೇವರು ನನಗೆ ನೀಡಿದ್ದ ಕೆಲವು ಒಳ್ಳೆ ಅಂಶಗಳು ನನ್ನನ್ನ ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ್ದವು.

ಇವೆಲ್ಲ ನಡೆದುದ್ದು ಒಂದು ಸುಂದರ ಹಳ್ಳಿಯ ಪರಿಸರದಲ್ಲಿ.!
ಉನ್ನತ ವಿದ್ಯಾಭ್ಯಾಸಕ್ಕೆಂದು ಕನಸುಗಳ ಜೊತೆಗೆ ಪಟ್ಟಣಕ್ಕೆ ಬಂದೆ.ಆದರೆ ಮೊದಲೇ ಕೆಟ್ಟ ವಿಧಿಯಾಟಕ್ಕೆ ಸಿಕ್ಕಿ ಸಿಲುಕುತ್ತಿದ್ದ ನನ್ನ ಪಾಪಿ ಹಣೆಬರಹಕ್ಕೆ ವಿದ್ಯಾರ್ಥಿ ದೆಸೆಯಲ್ಲೇ ರಾಹುದೆಸೆ ಅಡ್ಡಗಾಲು ಹಾಕಿ ನಿಂತಿತ್ತು,ಜೊತೆಗೆ ಪ್ರೀತಿಯ ಖಜಾನೆ ಹೊತ್ತು ಬಂದಿದ್ದ ನನಗೆ ಇಲ್ಲಿ ಸಿಕ್ಕಿದವರು ವಿಶ್ವಾಸಗಾತುಕ ಮಿತ್ರರು ಅವರು ಬಂದು ಪ್ರೀತಿಯನ್ನು ಹಂಚಿಕೊಳ್ಳದೆ ಅದನ್ನು ಖಾಲಿ ಮಾಡಿ ಮನಸ್ಸನ್ನು ಬರಿದು ಮಾಡಿ ಕೈ ಚೆಲ್ಲಿ ಹೊರಟರು.

ನಾನು ಇದಕ್ಕೆಲ್ಲ ಹಣೆಬರಹನೆ ಕಾರಣ ಎಂದುಕೊಂಡಿದ್ದೇನೆ!
ಆದರೂ ಕೊನೆಗಳಿಗೆಯಲ್ಲಿ ಕೈ ಹಿಡಿದ ದೇವರು ನನ್ನ ಕಣ್ಣೀರ ಕಡಲಲ್ಲಿ ಬರೆದಿದ್ದ ನನ್ನ ಕನಸಿನ ಚಿತ್ತಾರವನ್ನು ಅಲೆಗಳು ಬಂದು ಅಪ್ಪಳಿಸಿ ಅಳಿಸುವ ಮುನ್ನ ಹೃದಯ ಸಮುದ್ರದಲ್ಲಿ ಕಣ್ಣೀರನ್ನೇ ಬರಿದು ಮಾಡುವುದರ ಮೂಲಕ ಹಾಗೆಯೇ ಹಸಿರಾಗಿಸಿದ್ದಾನೆ.!

.....ಆದರೂ ಕೆಲವು ನೆನಪುಗಳು ಬೆಂಬಿಡದೆ ಕಾಡುತ್ತಲೇ ಇವೆ.
_____________________________________

ನಾನಾ ....?

ನನ್ನ ಫೋಟೋ
"ಜಗತ್ತಿನ ನಾಟಕರಂಗದಲ್ಲಿ ವಿಧಿಯ ಬರವಣಿಗೆಯನ್ನು ಮೀರುವವರು ಯಾರು?" ಅಂತ ಧೃಡವಾಗಿ ನಂಬಿರುವವನು ನಾನು! ನನ್ನಿಂದ ಏನೇ ಆದರೂ ಅದು ನಾನು ಮಾಡಿದ್ದಲ್ಲ,ನನ್ನ ಹಣೆಯಲ್ಲಿ ಬರೆದಿದ್ದುದು ಎಂದು ಹೇಳುವವನು ನಾನು.ಪುಂಗಿ ನಾದಕ್ಕೆ ತಲೆದೂಗಿ ನಡೆವ ನಾಗರಹಾವಂತೆ ,ವಿಧಿ ತೋರ್ಸೋ ದಾರಿಯಲ್ಲಿ ತಲೆ ತಗ್ಗಿಸಿ ನಡೆವ... ನಾನು ಹಣೆಬರಹದ ಮುಂದೆ ಏನು ಮಾಡಕ್ಕಾಗಲ್ಲ,ಹಣೆಲಿ ಏನ್ ಬರೆದಿರೋತ್ತು ಹಾಗೆ ಆಗಲೇ ಬೇಕು ಅದನ್ನ ಬದಲಾಯಿಸಲು ಹರಿ-ಬ್ರಹ್ಮಾದಿಗಳಿಂದಲೂ ಸಾದ್ಯವಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಮನಸ್ಸು ಮಾಡಿದ್ರೆ ಏನು ಮಾಡಕ್ಕಾಗಲ್ಲ ,ಹಣೆಯಲ್ಲಿ ಬರೆದಿರಬೇಕು ಅನ್ನುವಷ್ಟರ ಮಟ್ಟಿಗೆ ನಾನು ತಲುಪಿದ್ದೇನೆ. ಯಾಕೆಂದರೆ.. ವಿಧಿಗೆ ಸವಾಲ್ ಹಾಕಿ ಕಂಡಿದ್ದು ಬರೀ ಸೋಲಿನ ಸಾಲು........ ನನ್ನೊಂದಿಗೆ:hanebaraha@gmail.com